ತಿರುಮಲ ಬ್ರಹ್ಮೋತ್ಸವದಲ್ಲಿ ಸುರಪುರ ಸಂಸ್ಥಾನದಿಂದ ಪ್ರಥಮ ಪೂಜೆ

ವರದಿ:  ನಾಗರಾಜ್ ನ್ಯಾಮತಿ

ಸಂಸ್ಥಾನದ ರಾಜಪ್ರತಿನಿಧಿ ವೇಣುಮಾಧವ ನಾಯಕರಿಂದ ರಥಕ್ಕೆ ಮಂಗಳಾರತಿ
ಕ್ರಾಂತಿವಾಣಿ ವಾರ್ತೆ
ಸುರಪುರ: ನೆರೆಯ ರಾಜ್ಯ ಹೈದರಬಾದಿನ ತಿರುಪತಿ ತಿರುಮಲಾಧೀಶ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಸೋಮವಾರ ನಡೆದ ಬ್ರಹ್ಮೋತ್ಸವದ ನಿಮಿತ್ತ ವಿಜೃಂಭಣೆಯ ರಥೋತ್ಸವ ನಡೆಯಿತು. ರಥದ ಮೇಲಿಂದ ಸುರಪುರಮ್ ಎಂದು ಜೋರಾಗಿ ಅಬ್ಬರಿಸಿದಾಗ ಆರತಿ ತಟ್ಟೆಯೊಂದಿಗೆ ಬಂದ ಸುರಪುರ ಸಂಸ್ಥಾನದ ರಾಜಪ್ರತಿನಿಧಿ, ಸಂಸ್ಥಾನದ ಅಳಿಯ ವೇಣುಮಾಧವ ನಾಯಕ ಅವರು ರಥಕ್ಕೆ ಮಂಗಳಾರತಿ ಮಾಡಿದರು. ಬಳಿಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸುರಪುರ ಸಂಸ್ಥಾನದ ಪ್ರತಿನಿಧಿ, ಸಂಸ್ಥಾನದ ಅಳಿಯ ವೇಣುಮಾಧವ ನಾಯಕ, ವಿಶ್ವದಲ್ಲೇ ಶ್ರಿಮಂತ ದೈವವೆಂದು ಪ್ರಸಿದ್ಧಿಯಾಗಿರುವ ತಿರುಪತಿ ತಿರುಮಲಾಧೀಶ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಶತಶತಮಾನಗಳಿಂದ ಸುರಪುರ ಸಂಸ್ಥಾನದಿಂದ ಅಗ್ರ ಪೂಜೆ ನಡೆಯುತ್ತಿದೆ ಎಂದರು.
ಪ್ರತಿ ವರ್ಷ ತಿರುಪತಿಯ ಬ್ರಹ್ಮೋತ್ಸವ ಅಂಗವಾಗಿ ನಡೆಯುವ ರಥೋತ್ಸವದಲ್ಲಿ ಸುರಪುರ ಸಂಸ್ಥಾನ ಪ್ರಥಮ ಪೂಜೆ ಜರುಗಿದ ನಂತರವೇ ರಥೋತ್ಸವಕ್ಕೆ ಚಾಲನೆ ಸಿಗುತ್ತದೆ. ಇದು ಸುರಪುರ ಸಂಸ್ಥಾನದ ಅರಸರ ಕಾಲದಿಂದಲೂ ನಡೆದುಕೊಂಡು ಬರುತ್ತಿದೆ. ಇಂದಿಗೂ ಸಂಸ್ಥಾನದ ಅಗ್ರ ಪೂಜೆ ಮತ್ತೊಮ್ಮೆ ಅಲ್ಲಿ ನೆರದಿದ್ದ ಲಕ್ಷೋಪಲಕ್ಷ ಭಕ್ತರು ಕಣ್ತುಂಬಿಕೊಂಡರು. ನಮ್ಮ ಜತೆ ಶ್ರೀನಿವಾಸ ದೇವರು ಇದ್ದರು ಎಂದು ತಿಳಿಸಿದರು.
ಸುರಪುರದ ವೇಣುಗೋಪಾಲಸ್ವಾಮಿಯು ತಿರುಪತಿಯ ವೆಂಕಟೇಶ್ವರನ ಹೆಸರಿನಿಂದಲೂ ಪ್ರಖ್ಯಾತಿ ಪಡೆದಿದ್ದಾನೆ. ಇಬ್ಬರು ಒಂದೇ ಎಂದು ಕರೆಯಲಾಗುತ್ತದೆ. ಸುರಪುರ ಸಂಸ್ಥಾನದ ಅರಸರು ಗೋಪಾಲಸ್ವಾಮಿಯ ಪರಮ ಭಕ್ತರಾಗಿದ್ದಾರೆ. ಮನೆದೇವರಾಗಿದ್ದು ಪೂಜಿಸುತ್ತಾರೆ. ಒಮ್ಮೆ ವೆಂಕಟೇಶ್ವರ ಸ್ವಾಮಿ ಸುರಪುರ ಅರಸರ ಕನಸಿನಲ್ಲಿ ಬಂದು, ನೀವು ನನ್ನ ಮಹಾನ್ ಭಕ್ತರಾಗಿದ್ದು, ನೀವ್ಯಾರು ತಿರುಪತಿಗೆ ದರ್ಶನಕ್ಕಾಗಿ ಬರಬಾರದು. ನಿಮಗೆ ಬರುವ ತೊಂದರೆ ಬೇಡ. ನೀವಿದ್ದಲ್ಲಿಯೇ ದರ್ಶನ ಕೊಡುವೆ ಎಂದು ತಿಳಿಸಿದ್ದನಂತೆ. ಹೀಗಾಗಿ ಸ್ವಾಮೀಯ ಆದೇಶದಂತೆ ಇದುವರೆಗೂ ಅಲ್ಲಿಗೆ ಅರಸು ಮನೆತನದ ಯಾರೊಬ್ಬರು ಹೋಗುವುದಿಲ್ಲ ಎಂದು ಇತಿಹಾಸ ಮಾಹಿತಿ ನೀಡಿದರು.
ಇದರಿಂದಾಗಿ ಅರಸರು ಸುರಪುರದಲ್ಲಿಯೇ ವೇಣುಗೋಪಾಲಸ್ವಾಮಿ ದೇಗುಲ ನಿರ್ಮಿಸಿ ವೈಖಾನಸ ಬ್ರಾಹ್ಮಣರನ್ನು ಪೂಜೆಗೆ ನಿಯೋಜಿಸಿದರು. ತಿರುಪತಿಯಲ್ಲಿ ಜರುಗುವ ಪ್ರತಿ ಕಾರ್ಯಕ್ರಮವೂ ಸುರಪುರದಲ್ಲಿ ಜರುಗುವಂತೆ ಮಾಡಿದರು. ಹೀಗಾಗಿ ತಿರುಪತಿಯಲ್ಲಿ ಬ್ರಹ್ಮೋತ್ಸವದಲ್ಲಿ ಪೂಜೆ ಸಲ್ಲಿಸಲು ರಾಜಪ್ರತಿನಿಧಿಯನ್ನು ಮಾತ್ರ ಕಳುಹಿಸುತ್ತಾರೆ ಎಂದು ತಿಳಿಸಿದರು.
೯೦ರ ದಶಕದಲ್ಲಿ ಒಂದು ಅಚ್ಚರಿಯ ಘಟನೆ ಜರುಗಿದೆ. ಸುರಪುರದ ರಾಜಪ್ರತಿನಿಧಿಯನ್ನು ಕರೆಯದೇ ರಥೋತ್ಸವಕ್ಕೆ ಚಾಲನೆ ನೀಡಿದಾಗ ರಥವು ಸ್ವಲ್ಪ ಮುಂದೆ ಚಲಿಸಿ, ಸ್ವಲ್ಪ ಅಂತರದಲ್ಲಿ ನಿಂತಲೇ ನಿಂತು ಬಿಟ್ಟಿತಂತೆ. ಸಾವಿರಾರು ಜನರು ಎಷ್ಟೇ ಪ್ರಯತ್ನಪಟ್ಟು, ನಾನಾ ಹರ ಸಾಹಸಗಳನ್ನು ಮಾಡಿ ರಥ ಎಳೆದರೂ ಮುಂದೆ ಚಲಿಸಲಿಲ್ಲ. ನಂತರ ಹಿರಿಯರು, ಸುರಪುರದವರನ್ನು ಕರೆಯಿಸಿ ಮಂಗಳಾರತಿ ಮಾಡಿಸಿದಾಗ, ರಥ ಸರಾಗವಾಗಿ ಮುಂದೆ ಚಲಿಸಿತು ಎಂದು ಹಿರಿಯರು ಹೇಳುತ್ತಾರೆ ಎಂಬುದಾಗಿ ಸ್ಮರಿಸಿಕೊಂಡರು.
— — ರಾಜಪ್ರತಿನಿಧಿ——
ವೆಂಕಟೇಶ ಸ್ವಾಮಿಯ ಬ್ರಹ್ಮೋತ್ಸವದಲ್ಲಿ ಸುರಪುರ ಸಂಸ್ಥಾನದಿಂದ ಅಗ್ರಪೂಜೆ ಸಲ್ಲಿಸಲಾಯಿತು. ಹಲವು ವರ್ಷಗಳಿಂದ ಸಂಸ್ಥಾನದ ರಾಜಪ್ರತಿನಿಧಿಯಾಗಿ ರಥೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ದೈವವನ್ನು ಕಣ್ಮುಂಬಿಕೊಳ್ಳುತ್ತಿರುವುದು ನನ್ನ ಪೂರ್ವ ಜನ್ಮದ ಪುಣ್ಯವಾಗಿದೆ ಎಂದು ಸಂಸ್ಥಾನದ ರಾಜಪ್ರತಿನಿಧಿ, ಸಂಸ್ಥಾನದ ಅಳಿಯ ವೇಣುಮಾಧವ ನಾಯಕ ಪತ್ರಿಕೆಗೆ ತಿಳಿಸಿದ್ದಾರೆ.

 

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ