ಅನಧಿಕೃತವಾಗಿ ಪಟಾಕಿ ಮಾರುತ್ತಿದ್ದ 3 ಅಂಗಡಿ ಸೀಜ್

ವರದಿ: ನಾಗರಾಜ್ ನ್ಯಾಮತಿ

ಕ್ರಾಂತಿವಾಣಿ ವಾರ್ತೆ  ಸುರಪುರ: ಬೆಂಗಳೂರಿನ ಹೊರವಲಯದಲ್ಲಿ ಇತ್ತೀಚೆಗೆ ನಡೆದ ಪಟಾಕಿ ಗೋಡಾನ್ ಅವಘಡದಿಂದ ೧೪ ಜನರು ಸಜೀವ ದಹನವಾಗಿದ್ದು, ಇಂಥಹ ಘಟನೆಗಳು ಮರುಕಳಿಸಿದಂತೆ ರಾಜ್ಯ ಸರಕಾರದ ಆದೇಶದಂತೆ ತಾಲೂಕಿನಲ್ಲಿ ಪರವಾನಗಿ ಹೊಂದಿಲ್ಲದ ಪಟಾಕಿ ಅಂಗಡಿಗಳ ಮೇಲೆ ಕಂದಾಯ ಮತ್ತು ಪೊಲೀಸ್, ಅಗ್ನಿಶಾಮಕ ದಳದ ಅಧಿಕಾರಿಗಳು ಬುಧವಾರ ಬೆಳಗ್ಗೆ ದಾಳಿ ನಡೆಸಿ ೩ ಅಂಗಡಿಗಳನ್ನು ಸೀಜ್ ಮಾಡಲಾಯಿತು.


ಕಂದಾಯ ಮತ್ತು ಪೊಲೀಸ್, ಅಗ್ನಿಶಾಮಕ ದಳದ ಅಧಿಕಾರಿಗಳು ಕಾಲ್ನಡಿಗೆಯಲ್ಲಿ ತರಕಾರಿ ಸಮೀಪದ ಪಟಾಕಿ ಅಂಗಡಿಗಳ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಪಟಾಕಿ ಮಾರುವ ಪರವಾನಗಿಯನ್ನು ಕೇಳಿದಾಗ ಇಲ್ಲವೆಂದು ಉತ್ತರಿಸಿದರು. ಅಂಗಡಿ ತುಂಬ ಪಟಾಕಿಗಳು ಇದ್ದವು. ಅಲ್ಲದೆ ಅಪಾರ ಜನಸಂದಣ ಯುಳ್ಳ ಪ್ರದೇಶದಲ್ಲಿ ಅಂಗಡಿಗಳು ಇದ್ದಿದ್ದರಿಂದ ಮುಲಾಜಿಲ್ಲದೆ ಎರಡು ಅಂಗಡಿಗಳಿಗೆ ಸೀಜ್ ಮಾಡಿ ಸರಕಾರದ ಮುದ್ರೆ ಒತ್ತಿದರು.
ಅಲ್ಲಿಂದ ದರಬಾರ ರಸ್ತೆ ಮಾರ್ಗವಾಗಿ ಶ್ರೀ ರಾಘವೇಂದ್ರ ದೇಗುಲದ ಹತ್ತಿರದ ಶ್ರೀ ಲಕ್ಷ್ಮೀ ಸ್ಟೋರ‍್ಸ್ ಅಂಗಡಿ ಮೇಲೆ ದಾಳಿ ನಡೆಸಿ ಪಟಾಕಿ ಪರವಾನಗಿ ಕೇಳಿದಾಗ ಅಂಗಡಿ ಮಾಲೀಕ ಉತ್ತರಿಸಲು ತಡಬಡಾಯಿಸಿದರು. ಪಟಾಕಿ ಇರುವುದರಿಂದ ಅಂಗಡಿಯ ಮುಂಭಾಗ ಇರುವ ಎಲ್ಲ ವಸ್ತುಗಳನ್ನು ಎತ್ತಿಟ್ಟುಕೊಳ್ಳಲು ೧೦ ನಿಮಿಷ ನೀಡಿದರು. ಬಳಿಕ ಅಂಗಡಿಯನ್ನು ಸೀಜ್ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ತಹಸೀಲ್ದಾರ್ ಕೆ. ವಿಜಯಕುಮಾರ, ಜಿಲ್ಲಾಧಿಕಾರಿಗಳು ಭವಿಷ್ಯತ್ತಿನಲ್ಲಿ ಪಟಾಕಿಯ ಅವಘಡಗಳು ಸಂಭವಿಸದAತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದೆ. ತಾಲೂಕಿನಲ್ಲಿ ಪಟಾಕಿ ಮಾರಾಟ ಮಾಡುವ ಅಂಗಡಿಗಳ ಮೇಲೆ ಮೂರು ದಿನಗಳ ಕಾಲ ದಾಳಿ ನಡೆಯುತ್ತದೆ. ಬಳಿಕ ಸಮಗ್ರ ವರದಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಲಾಗುತ್ತದೆ. ಪಟಾಕಿಗಳನ್ನು ಸಂಗ್ರಹಿಸುವ, ಸಾಗಣೆ ಮಾಡುವ ಹಾಗೂ ಮಮಾರಾಟ ಮಾಡುವ ಸಂದರ್ಭದಲ್ಲಿ ಅನುಮತಿಯನ್ನು ಸಮಕ್ಷಮ ಪ್ರಾಧಿಕಾರದಿಂದ ಪಡೆದಿರುವುದನ್ನು ಸ್ಥಳದಲ್ಲೇ ದೃಢೀಕರಿಸಿಕೊಳ್ಳಲಾಗಿದೆ. ಪೊಲೀಸ್ ಮತ್ತು ಅಗ್ನಿಶಾಮಕ ಇಲಾಖೆಗಳ ಅಧಿಕಾರಿಗಳು ತಪಾಸಣೆಗೆ ಸಹಕಾರ ನೀಡಿದ್ದಾರೆ. ತಾಲೂಕಿನಲ್ಲಿ ಮುಂದಿನ ದಿನಗಳಲ್ಲಿ ಪಟಾಕಿಗಳಿಂದ ಯಾವುದೇ ಅವಘಡಗಳು ತನ್ಮೂಲಕ ಜೀವ ಹಾನಿ ಸಂಭವಿಸದಂತೆ ಸಂಪೂರ್ಣ ಎಚ್ಚರಿಕೆ ವಹಿಸಲಾಗುತ್ತದೆ. ನಿಯಮ ಮೀರಿದರೆ ಯಾರೇ ಆದರೂ ಮುಲಾಜಿಲ್ಲದೆ ಕ್ರಮಕ್ಕೆ ಮುಂದಾಗಲಾಗುವುದು ಎಂದು ತಿಳಿಸಿದರು.
ದಾಳಿ ಸಂದರ್ಭದಲ್ಲಿ ಸಿಪಿಐ ಆನಂದ ವಾಗ್ಮೋಡೆ, ಪೋಲಿಸ್ ಪೇದೆಗಳಾದ ಶಿವರಾಜ್ ಪಾಣೆಂಗಾವ್, ನಂದಪ್ಪ, ದಯಾನಂದ ಜಮಾದಾರ, ಕಂದಾಯ ನಿರೀಕ್ಷಕ ಬಸವರಾಜ ಬಿರಾದಾರ, ಗ್ರಾಮ ಆಡಳಿತ ಅಧಿಕಾರಿಗಳಾದ ದುಷತ್ ಕಮ್ಮಾರ್, ಪ್ರದೀಪಕುಮಾರ ನಲವಾಡೆ, ಸವೇ ಅಧಿಕಾರಿ ಶಿವಾನಂದ ಗೋಗಿ, ಇತರರಿದ್ದರು.

ಜನತೆಯಲ್ಲಿ ಗೊಂದಲ: ಯಾವುದೇ ಮಾಹಿತಿಯಿಲ್ಲದೇ ಪಟಾಕಿ ಅಂಗಡಿಗಳ ಮೇಲೆ ದಾಳಿ ನಡೆಸಿದ್ದು, ಮಾಲೀಕರಲ್ಲಿ ದಿಗಿಲು ಹುಟ್ಟಿಸ್ಸಿತ್ತು. ಅಧಿಕಾರಿಗಳ ಕೇಳುವ ಪ್ರಶ್ನೆಗೆ ಯಾರ ಬಳಿಯೂ ಉತ್ತರವೇ ಇರಲಿಲ್ಲ. ಒಂದು ಅಂಗಡಿಯವರAತೂ ಬೀಗದ ಕೈ ಕೊಡದೇ ತಾಲೂಕಾಡಳಿತ ಬಿಳಿ ಬಟ್ಟೆಯನ್ನು ಕಟ್ಟಿ ಸೀಜ್ ಮಾಡಿದ ಘಟನೆಯೂ ನಡೆಯಿತು. ಸಾರ್ವಜನಿಕರು ತಾಲೂಕಾಡಳಿತ ಮತ್ತು ಪೊಲೀಸ್ ಮತ್ತು ಅಗ್ನಿಶಾಮಕ ಇಲಾಖೆಗಳ ಅಧಿಕಾರಿಗಳು ಒಟ್ಟಿಗೆ ಆಗಮಿಸಿದ್ದನ್ನು ಕಂಡು ಜನರು ಆಶ್ಚರ್ಯ ಚಕಿತರಾಗುತ್ತಿರುವುದು ಕಂಡು ಬಂದಿತು.
ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ