ಕ್ರಾಂತಿ ವಾಣಿ ವಾರ್ತೆ
ವರದಿ : ಮಾನವ ಧರ್ಮ ಮಂಟಪ-ಅಬ್ಬಿಗೇರಿ : ನಿಂಗಪ್ಪ ಎನ್. ಚಲವಾದಿ
ನರೇಗಲ್ಲ : ಬೆಳೆದು ನಿಂತ ಮರ ಹರಿಯುವ ನೀರು ಬೀಸುವ ಗಾಳಿ ನಿಂತ ನೆಲ ತ್ಯಾಗದ ಹಿರಿಮೆಯನ್ನು ಮತ್ತು ಪರೋಪಕಾರವನ್ನು ಎತ್ತಿ ತೋರಿಸುತ್ತದೆ. ಸಿರಿ ಸಂಪದ ಗಳಿಸಲು ಉಳಿಸಲು ಕುಡಿಯಲು ಸೇದಲು ಬೇಕಾದಷ್ಟು ಸಮಯವಿದೆ. ಆದರೆ ಆಧ್ಯಾತ್ಮ ಸಾಧನೆಗೆ ಮತ್ತು ಭಗವಂತನ ಸ್ಮರಣೆಗೆ ಸಮಯವಿಲ್ಲ. ಮನುಷ್ಯನ ಮಾತು ಕಮ್ಮಿಯಾಗಿ ಮಾಡುವ ಕೆಲಸ ಕಾರ್ಯಗಳು ಹೆಚ್ಚಾಗಬೇಕು. ದೇಹವನ್ನು ದುಡಿಮೆಗೆ ಮನಸ್ಸನ್ನು ದೇವರಿಗೆ ಅರ್ಪಿಸಿ ಮುನ್ನಡೆದರೆ ಜೀವನ ಸಾರ್ಥಕಗೊಳ್ಳುವುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಸೋಮವಾರ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ ಐದನೇ ದಿನದ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಸುಖ ದು:ಖಗಳ ಸಂಮಿಶ್ರಣವೇ ಜೀವನ. ಸುಖದ ನಂತರ ದು:ಖ ದು:ಖದ ನಂತರ ಸುಖ ಬರುವುದು ಸಹಜ. ಸುಖವಿರಲಿ ಕಷ್ಟವಿರಲಿ ಬದುಕಿ ಬಾಳುವ ಆದರ್ಶ ಗುಣಗಳನ್ನು ಸಂಪಾದಿಸಬೇಕು. ರೈತ ದೇಶದ ಬೆನ್ನೆಲುಬು. ರೈತ ಒಕ್ಕಿದರೆ ಲೋಕವೆಲ್ಲ ಉಕ್ಕುವುದು ಇಲ್ಲದೇ ಇದ್ದರೆ ಲೋಕ ಬಿಕ್ಕುವುದೆಂದು ಸರ್ವಜ್ಞ ಕವಿ ಎಚ್ಚರಿಸಿದ್ದಾನೆ. ಕಾಯಕದಿಂದಲೇ ಕಳಾ ಚೈತನ್ಯ ಪ್ರಾಪ್ತವಾಗುವುದೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಹಾಗೂ ಕಾಯಕವೇ ಕೈಲಾಸ ಎಂದು ಶರಣರು ಹೇಳಿದ್ದುಂಟು. ಧರ್ಮ ಅರ್ಥ ಕಾಮ ಮತ್ತು ಮೋಕ್ಷ ಎಂಬ ಚತುರ್ವಿಧ ಪುರುಷಾರ್ಥಗಳಲ್ಲಿ ಒಂದನ್ನಾದರೂ ಸಂಪಾದಿಸದಿದ್ದರೆ ಜೀವನ ವ್ಯರ್ಥವಾಗುತ್ತದೆ. ನಾಡಿಗೆ ಅನ್ನ ನೀಡುವ ರೈತನ ಬಾಳು ಉಜ್ವಲವಾಗಬೇಕು. ಈಶ ನಿರ್ಮಿತವಾದ ಈ ಪ್ರಪಂಚದಲ್ಲಿ ಇರುವುದೆಲ್ಲವೂ ಅಮೂಲ್ಯ ಸಂಪತ್ತು. ಸಂಪತ್ತು ಇಲ್ಲದೇ ಇದ್ದರೆ ಬದುಕಬಹುದು. ಆದರೆ ಮಣ್ಣುಯಿಲ್ಲದೇ ಅನ್ನವಿಲ್ಲದೇ ಬದುಕಲಾಗದು. ದೇಶದ ಬೆಳವಣಿಗೆಗೆ ಅಸಿ ಮಸಿ ಮತ್ತು ಕೃಷಿ ಅವಶ್ಯಕತೆ ಬಹಳಷ್ಟಿದೆ. ಮಣ್ಣು ನೀರು ಬೆಂಕಿ ಗಾಳಿ, ಕಲ್ಲಿನಲ್ಲಿಯೂ ದೇವರನ್ನು ಕಂಡು ಪೂಜಿಸುವ ಮನೋಭಾವ ಕಾಣುತ್ತೇವೆ. ನವರಾತ್ರಿಯ 5ನೇ ದಿನ ಸ್ಕಂದ ಮಾತೆ ಹೆಸರಿನಲ್ಲಿ ದೇವಿಯನ್ನು ಪೂಜಿಸುತ್ತಾರೆ. ಸ್ಕಂದ ಮಾತಾ ಪೂಜೆಯಿಂದ ಮುಕ್ತಿ ಶಕ್ತಿ ಪ್ರಾಪ್ತವಾಗುವುದು. ಪ್ರಾಪಂಚಿಕ ಬಂಧನದಿಂದ ಮುಕ್ತನಾಗುತ್ತಾನೆ ಎಂದರು.
ಹಂಪಸಾಗರ ನವಲಿ ಹಿರೇಮಠದ ಶಿವಲಿಂಗ ರುದ್ರಮುನಿ ಶಿವಾಚಾರ್ಯರು ಪ್ರಾಸ್ತಾವಿಕ ಮಾತನಾಡಿ, ಭವ ಬಂಧನದಿಂದ ಮುಕ್ತಿಗೊಳಿಸುವ ಶಕ್ತಿ ಶ್ರೀ ಗುರುವಿಗೆ ಇದೆ. ಎಲ್ಲ ಧರ್ಮಗಳಲ್ಲಿಯೂ ಸಹ ಗುರುವಿಗೆ ಪ್ರಥಮ ಸ್ಥಾನ ಕಲ್ಪಿಸಿದ್ದಾರೆ. ಅರಿವು ಆಚರಣೆಯಿಂದ ಬದುಕನ್ನು ಕಟ್ಟಿಕೊಳ್ಳಬೇಕೆಂದರು.
ಬಸವಕಲ್ಯಾಣ ಶಾಸಕರಾದ ಶರಣು ಸಲಗರ ಮಾತನಾಡಿ, ಬಸವಕಲ್ಯಾಣ ನಗರಕ್ಕೆ ಶ್ರೀ ರಂಭಾಪುರಿ ಜಗದ್ಗುರುಗಳವರ ದಸರಾ ದರ್ಬಾರ ಸಮಾರಂಭವನ್ನು ನಡೆಸಿಕೊಡಬೇಕೆಂದು ಬಿನ್ನವಿಸಿದರು.
ಸಂಸದ ಬಿ.ವೈ.ರಾಘವೇಂದ್ರ, ಚಂದ್ರು ಲಮಾಣಿ, ವಿ.ಪ.ಸದಸ್ಯ ಎಸ್.ವಿ.ಸಂಕನೂರ, ರೋಣ ಪುರಸಭಾಧ್ಯಕ್ಷೆ ಗೀತಾ ಎಮ್. ಮಾಡಲಗೇರಿ, ಗಜೇಂದ್ರಗಡ ಪುರಸಭಾಧ್ಯಕ್ಷ ಸುಭಾಷ್ ಮಲ್ಲಪ್ಪ ಮ್ಯಾಗೇರಿ, ನರೇಗಲ್ಲ ಪಟ್ಟಣ ಪಂಚಾಯತ್ ಅಧ್ಯಕ್ಷ ಫಕ್ಕೀರಪ್ಪ ಮಳ್ಳಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಶಾಸಕ ಜಿ.ಎಸ್.ಪಾಟೀಲ ಉಪಸ್ಥಿತರಿದ್ದರು.
ಬಾಲಕ-ಪಾಲಕ-ಶಿಕ್ಷಕರ ನೀತಿ ಸಂಹಿತೆ” ಕೃತಿಯನ್ನು ಸಂಸದ-ಮಾಜಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿಯವರು ಬಿಡುಗಡೆ ಮಾಡಿ ಜೀವನದ ಶ್ರೇಯಸ್ಸಿಗೆ ನೀತಿ ಸಂಹಿತೆ ಮುಖ್ಯ. ಕ್ರಮಬದ್ಧವಾದ ಜೀವನ ಬದುಕಿನ ಉತ್ಕರ್ಷತೆಗೆ ಕಾರಣವಾಗುತ್ತದೆ. ಮನುಷ್ಯ ಜೀವನದಲ್ಲಿ ಬಾಲ್ಯ ಬದುಕಿನ ಸಂಜೀವಿನಿಗೆ ಕಾರಣವಾಗುತ್ತದೆ. ಮನುಷ್ಯ ಜೀವನದಲ್ಲಿ ಬಾಲ್ಯ ಹೆತ್ತ ತಾಯ್ತಂದೆಗಳ ಪಾತ್ರ ಜ್ಞಾನ ಸಂವರ್ಧನೆಗೆ ಕಾರಣವಾಗುತ್ತದೆ ಎಂದರು.
2025ರ ದಸರಾ ಮಹೋತ್ಸ ವ ಬಸವಕಲ್ಯಾಣದಲ್ಲಿ
ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳವರ 34ನೇ ವರ್ಷದ ದಸರಾ ಧರ್ಮ ಸಮ್ಮೇಳನ ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ನಡೆಸುವುದಾಗಿ ಶ್ರೀ ರಂಭಾಪುರಿ ಜಗದ್ಗುರುಗಳು ಪ್ರಕಟಪಡಿಸಿದರು. ಬಸವಕಲ್ಯಾಣದಲ್ಲಿ ದಸರಾ ಸಮಾರಂಭ ನಡೆಸುವಂತೆ ಅಲ್ಲಿಯ ಶಾಸಕ ಶರಣು ಸಲಗರ ಹಾಗೂ ಬೀದರ ಜಿಲ್ಲೆಯ ಮಠಾಧೀಶರು, ಗಣ್ಯರು ಸಲ್ಲಿಸಿದ ಮನವಿಗೆ ಶ್ರೀ ಜಗದ್ಗುರುಗಳು ಒಪ್ಪಿಗೆ ನೀಡಿದರು.
ಕೃಷಿ ತಜ್ಞರಾದ ಆನಂದ ಆಶೀಷರ್ ಮಾತನಾಡಿ ಸಾವಯವ ಕೃಷಿಯಿಂದ ಭೂಮಿಯ ತಾಕತ್ತು ಹೆಚ್ಚುತ್ತದೆ. ಉತ್ತಮವಾದ ಫಸಲು ದೊರಕುತ್ತದೆ. ಸಾವಯವ ಕೃಷಿಯಿಂದ ಬೆಳೆದ ಪದಾರ್ಥಗಳನ್ನು ಬಳಸುವುದರಿಂದ ಆರೋಗ್ಯ ಸಂಪತ್ತು ಹೆಚ್ಚುವುದು. ಸಾವಯವ ಹಸಿರು ದೇಶಕ್ಕೆ ಉಸಿರು ಎಂಬುದನ್ನು ಮರೆಯಬಾರದೆಂದರು.
ಬಂಕಾಪುರ ಅರಳೆಲೆ ಹಿರೇಮಠದ ರೇವಣಸಿದ್ಧೇಶ್ವರ ಶಿವಾಚಾರ್ಯರು ನೇತೃತ್ವ ವಹಿಸಿದ್ದರು. ಶಾಖಾ ಶಿವಯೋಗ ಮಂದಿರ ನಿಡಗುಂದಿಕೊಪ್ಪದ ಅಭಿನವ ಚನ್ನಬಸವ ಸ್ವಾಮಿಗಳು ಸಮ್ಮುಖ ವಹಿಸಿದ್ದರು. ಮಾತನಾಡಿದರು.
ಗುರು ರಕ್ಷೆ: ನಿಡಗುಂದಿ ರುದ್ರಮುನಿ ಶಿವಾಚಾರ್ಯರು, ದುಗ್ಲಿ-ಕಡೇನಂದಿಹಳ್ಳಿ ರೇವಣಸಿದ್ಧೇಶ್ವರ ಶಿವಾಚಾರ್ಯರು, ತುಪ್ಪದಕುರಹಟ್ಟಿ ಡಾ.ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯರು, ಕೊಡಗಾನೂರು ಚಂದ್ರಶೇಖರ ಸ್ವಾಮಿಗಳು, ಲಕ್ಷ್ಮೇಶ್ವರದ ಸಿದ್ಧರಾಮಯ್ಯ ಘಂಟಾಮಠ, ದೇವಪ್ಪ ಮಾದರ, ಬಿ.ಎಮ್.ಸಜ್ಜನ್, ಡಾ.ಬಿ.ವೈ.ಕಂಬಳಿಹಾಳ, ಡಾ.ಬಸವರಾಜ ದಿಂಡೂರ, ಗದಗಿನ ಕಿರಣ ಭೂಮಾ, ಸದಾಶಿವಯ್ಯ ಮದರಿಮಠ, ಈಶಣ್ಣ ಜಾಲಿಹಾಳ ಅಬ್ಬಿಗೇರಿ, ಗದಗಿನ ಶರಣಬಸಪ್ಪ ಗುಡಿಮನಿ ಇವರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆ ನೀಡಿ ಆಶೀರ್ವದಿಸಿದರು.
ಹೆಳವನ ಪಾತ್ರ: ಬೈಲಹೊಂಗಲ ತಾಲೂಕ ದೊಡ್ಡವಾಡದ ಚನಬಸಯ್ಯ(ಅಜ್ಜಯ್ಯ)ಪೂಜಾರ ಇವರು ಹೆಳವನ ಪಾತ್ರದಲ್ಲಿ ಆಗಮಿಸಿ ಶ್ರೀ ರಂಭಾಪುರಿ ಜಗದ್ಗುರುಗಳವರ ಇತಿಹಾಸ ಮತ್ತು ಪೀಠ ಪರಂಪರೆ ಕುರಿತು ಸವಿಸ್ತಾರವಾಗಿ ವಿವರಿಸಿದರು.
ಗದಗಿನ ಚಂದ್ರು ಬಾಳಿಹಳ್ಳಿಮಠ ಸರ್ವರನ್ನು ಸ್ವಾಗತಿಸಿದರು. ಅಬ್ಬಿಗೇರಿ ಹಿರೇಮಠದ ಮಹಿಳಾ ಮಂಡಳಿಯವರಿಂದ ವೇದಘೋಷ, ಗದಗಿನ ಗಾನಭೂಷಣ ವೀರೇಶ ಕಿತ್ತೂರ ಮತ್ತು ಡಾ. ಪಂಚಾಕ್ಷರಿ ಬಾಲಚಂದ್ರ ಶಾಸ್ತಿçಗಳು ಹಿರೇಮಠ, ಚಿಕ್ಕಮಣ್ಣೂರು-ಬೆಂಗಳೂರು ಇವರಿಂದ ಸಂಗೀತ ಜರುಗಿತು. ಶಿವಮೊಗ್ಗದ ಶಾಂತಾ ಆನಂದ ನಿರೂಪಿಸಿದರು.
ಅನ್ನ ದಾಸೋಹ: ಸಮಾರಂಭಕ್ಕೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಅಗಮಿಸುವ ಪ್ರತಿಯೊಬ್ಬರಿಗೂ ದಸರಾ ಸಮಿತಿಯವರು ಅನ್ನ ಪ್ರಸಾದದ ವ್ಯವಸ್ಥೆ ಮಾಡಿದ್ದು ಬೆಳಿಗ್ಗೆ 8.30ರಿಂದ 11ರ ವರೆಗೆ ಉಪಹಾರ ಮಧ್ಯಾಹ್ನ 12.30 ರಿಂದ 4 ರಾತ್ರಿ 9.30ರಿಂದ 11.00ರ ವರೆಗೆ ದಾಸೋಹ ನಡೆಯುತ್ತಿದೆ. ಪರಸ್ಥಳದಿಂದ ಬರುವವರಿಗಾಗಿ ವಾಸ್ತವ್ಯದ ವ್ಯವಸ್ಥೆ ಕಲ್ಪಿಸಿದ್ದಾರೆ.
ಇಂದಿನ ಅನ್ನ ದಾಸೋಹದ ಸೇವೆ ತೆವಡೆಹಳ್ಳಿ ಟಿ.ಎ.ಪ್ರಸನ್ನಕುಮಾರ ಹಾಗೂ ಟಿ.ಎ.ದಕ್ಷಿಣಾಮೂರ್ತಿ ಮತ್ತು ಕುಟುಂಬ ವರ್ಗ, ಬೆಂಗಳೂರಿನ ಪ್ರಭು ವಿರುಪಾಕ್ಷಪ್ಪ ಬೇವಿನಕಟ್ಟಿ, ಹಾಗೂ ಬಾಬು ನವರಂಗ ಇವರಿಂದ ಜರುಗಿತು.